ವಿಜಯಪುರದ ಶ್ರೀಕಾಂತ ಶಿರಡೋಣ ಮತ್ತು ಅನ್ನಪೂರ್ಣ ಶಿರಡೋಣ ದಂಪತಿಯ ಪುತ್ರ ಸಂತೋಷನ ಸಾಧನೆ ಕನ್ನಡಿಗರಿಗೆ ಸಂತೋಷ ತಂದಿದೆ. ಯುಪಿಎಸ್ಸಿ ಪರೀಕ್ಷೆ ಪಾಸಾಗುವುದು ಒಂದು ತಪಸ್ಸು ಇದ್ದ ಹಾಗೆ. ಸತತ ಪರಿಶ್ರಮ ,ಶೃದ್ದೆ , ಶಿಸ್ತುಬದ್ಧ ಓದುವಿಕೆ, ಮನಸ್ಸು ನಿಗ್ರಹ ಮತ್ತು ಕುಟುಂಬದ ಸಂಪೂರ್ಣ ಬೆಂಬಲದಿಂದ ಕಠಿಣವಾದ ಪರೀಕ್ಷೆಯನ್ನು ನಾನು ಪಾಸುಮಾಡಿದ್ದೇನೆ. ನನ್ನ ಪ್ರಯತ್ನದ ಜೊತೆ ಭಗವಂತನ ಮತ್ತು ಹಿರಿಯರ ಆಶೀರ್ವಾದದಿಂದ ಆಯ್ಕೆಯಾಗಿದ್ದಕ್ಕೆ ತುಂಬಾ ಸಂತೋಷವಾಗಿದೆ.
ಶಿರಡೋಣದ ಹುನ್ನೂರ ಸಿದ್ದ ಮತ್ತು ವಿಜಯಪುರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಭಕ್ತರಾದ ಶಿರಡೋಣ ಕುಟುಂಬದಲ್ಲಿ ಸಂತೋಷನ ಸಾಧನೆ ಕಂಡು ಹೆಮ್ಮೆ ಪಡುತ್ತಿದ್ದಾರೆ. ಸಂತೋಷನ ಅಜ್ಜಿಯವರು(ಗೌರಮ್ಮಬಾಯಿ ಶಿವಪ್ಪ ಶಿರಡೋಣ) ಮೊಮ್ಮಗ ಅಧಿಕಾರಿಯಾಗುತ್ತೇನೆ ಎಂದು ತಿಳಿದಾಗ ಒಂದು ದಿನ ರಾತ್ರಿ ನಿದ್ದೇನೆ ಬಂದಿಲ್ಲ ಎಂದು ಹೇಳುತ್ತಿರುವುದು ಅವರ ಮೊಮ್ಮಗನ ಸಾಧನೆಗೆ ಹಿಡಿದ ಕನ್ನಡಿ.
ಪ್ರತಿಷ್ಠಿತ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದುಕೊಂಡು MNC ಕಂಪನಿಯಲ್ಲಿ ಕೆಲಸಗಿಟ್ಟಿಸಿಕೊಂಡು ಸುಮಾರು ೮ ತಿಂಗಳು ಕೆಲಸ ಮಾಡಿ , ಇಲ್ಲ ನಾನು ಸಿವಿಲ್ ಸರ್ವಿಸ್ ಪರೀಕ್ಷೆ ಬರೆದು ಪಾಸಾಗಿ ದೇಶ ಸೇವೆ ಮಾಡಲೇಬೇಕು ಎಂದು ಹಠತೊಟ್ಟು , ೧೮ ಲಕ್ಷ ಸಂಬಳದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊರಟಿದ್ದು ದೆಹಲಿಗೆ! ಕಾರಣ ದೇಶ ಸೇವೆ!
ಇದು ನನ್ನ ನಾಲ್ಕನೆಯ ಪ್ರಯತ್ನ. ನಾಲ್ಕನೆಯ ಪ್ರಯತ್ನದಲ್ಲಿ ೬೪೧ ಬಂದಿದ್ದು, ಹಿಂದಿನ ಸಲ ಸಂದರ್ಶನಕ್ಕೆ ಹೋಗಿದ್ದರು ಸ್ವಲ್ಪ ಅಂಕಗಳಿಂದ ಶ್ರೇಣಿ ತಪ್ಪಿತ್ತು , ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಮತ್ತೆ ರೀಸ್ಟಾರ್ಟ್ ಮಾಡಿದ ಫಲ ೬೪೧ ನೇ ಶ್ರೇಣಿ ! ನಾನು ಮೂರೂ ಪ್ರಯತ್ನದಲ್ಲಿ ಯಶಸ್ಸು ಕಾಣದೆ ಇದ್ದಾಗ ಸ್ವಾಭಾವಿಕವಾಗಿ ಆತ್ಮವಿಶ್ವಾಸ ಕುಂದುವುದು ಆದರೆ ಅದನ್ನು ಕುಂದದೆ ಹಾಗೆ ನೋಡಿಕೊಂಡು ಮಾನಸಿಕವಾಗಿ ಗಟ್ಟಿ ಇರುವುದು ಅತಿ ಅವಶ್ಯ!
ಸ್ವಲ್ಪ ಮನಸ್ಸಿನಲ್ಲಿ ತಳಮಳ ಆದಾಗ ನನ್ನ ತಾಯಿ “ನಮ್ಮ ನಿಂಬರಗಿ ಮುತ್ಯಾ” (ದೇವರ ನಿಂಬರಗಿಯ ಶ್ರೀ ಗುರುಲಿಂಗ ಜಂಗಮ ಮಹಾರಾಜರು) ನ ಆಶೀರ್ವಾದ ಇದೆ ಇನ್ನಷ್ಟು ಪ್ರಯತ್ನ ಮಾಡು ಆಗೇ ಆಗುತ್ತೆ ಎಂದು ಹುರುದುಂಬಿಸುತ್ತಿದ್ದರು. ಇದರ ಜೊತೆ ನನಗೆ ಒಂದು ಹಿಂದಿನ ನೆನಪು ಮಾಡಿಕೊಡುತ್ತಿದ್ದರು, ಬಳ್ಳೊಳ್ಳಿಯ ನಮ್ಮ ಕಲ್ಲಮ್ಮ ಅಜ್ಜಿ, ನಾನು ೫ ನೇ ತರಗತಿಗೆ ಹುಲಿಕೋಟಿಗೆ ಹೋಗುವಾಗ ಅಜ್ಜಿಯ ಕಾಲು ಮುಗಿದು ಆಶೀರ್ವಾದ ತಗೆದುಕೊ ಎಂದು ನಮ್ಮ ತಾಯಿ ಹೇಳಿದ್ದರು, ನಾನು ಅವರ ಆಶೀರ್ವಾದ ಪಡೆಯುವಾಗ “ನಮ್ಮ ಅಜ್ಜಿ ನಮ್ಮ ಮನೆಯಲ್ಲಿ ಇಂಜಿನಿಯರ್ , ಡಾಕ್ಟರ್ ಆಗಿದ್ದಾರೆ” ನೀನೊಬ್ಬ ಡಿಸಿ ಆಗು ಎಂದು ಹೇಳಿದ್ದರು” , ಅಜ್ಜಿಯ ಆಶೀರ್ವಾದವು ಇದೆ ಎಂದು ನೆನಪಿಸಿ ನನಗೆ ಆತ್ಮವಿಶ್ವಾಸ ತುಂಬಿಸುತಿದ್ದರು.
ದೆಹಲಿಯ ವಾದಿರಾಮ್ ಮತ್ತು ರವಿ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದು, ದೆಹಲಿಯಲ್ಲಿ, ವಿಜಯಪುರದಲ್ಲಿ ಮತ್ತು ಬೆಂಗಳೂರಲ್ಲಿ ಇದ್ದುಕೊಂಡು ಓದಿದ್ದೇನೆ. ಆದರೆ ಪರೀಕ್ಷೆಗೆ ತರಬೇತಿ ಕಡ್ಡಾಯನಾ? ಜನರಲ್ ಸ್ಟಡೀಸ್ ಗೆ ತರಬೇತಿ ಅವಶ್ಯಕತೆ ಕಡಿಮೆ ಆದರೆ ಒಪ್ಷನಲ್ ಸಬ್ಜಕ್ಟ್ ತಯಾರಿಗೆ ತರಬೇತಿ ಪಡೆದರೆ ಉತ್ತಮ ಎಂದು ನನ್ನ ಭಾವನೆ. ತರಬೇತಿ ಪಡೆದಿದ್ದು ನನಗೆ ತುಂಬಾ ಸಹಕಾರಿಯಾಗಿದೆ. ದಿನ ನಿತ್ಯದ ಸುದ್ದಿ ಪತ್ರಿಕೆಗಳು ಓದುವುದು ಅವಶ್ಯ. ಸಿಲೆಬಸ್ ಚೆನ್ನಾಗಿ ತಿಳಿದುಕೊಂಡು ಯಾವ ವಿಷಯ ದಿನ ಪತ್ರಿಕೆಯಲ್ಲಿ ಓದಬೇಕು ಎಂದು ತಿಳಿದುಕೊಂಡು ಓದಿದರೆ ಇನ್ನು ಉತ್ತಮ. ನಾನು ಆರ್ಟಿಫಿಷಿಯಲ್ ಇಂಟಿಲ್ಲೆಜೆನ್ಸ್ ಚಾಟ್ ಜಿಪಿಟಿ ಬಳಿಸಿಕೊಂಡಿದ್ದು ನನಗೆ ಅಭ್ಯಾಸದಲ್ಲಿ ನೆರವಾಗಿದೆ. ಹೀಗೆ ತಮ್ಮ ಯಶಸ್ವಿ ಹಿಂದಿನ ಗುಟ್ಟನ್ನು ಪರೀಕ್ಷೆ ಬರೆಯುವರಿಗೆ ಸಹಾಯವಾಗಲಿ ಎಂದು ಹೇಳಿದರು.
ಯಾವದೇ ಇಂತಹ ಸಾಧನೆಯನ್ನು ಮಾಡಲು ಪ್ರೇರಣೆ ಬಹಳ ಅಗತ್ಯ! ತಂದೆ ಮತ್ತು ತಾಯಿಯವರಿಂದ ಖಂಡಿತ ಪ್ರೇರಣೆ ಇತ್ತು. ಇದರ ಜೊತೆ ನಾನು ಸಿವಿಲ್ ಸರ್ವಿಸ್ ಬರೆಯಲೇ ಬೇಕು ಎಂದು ನಮ್ಮ ಕಾಕಾ(ಚಿಕ್ಕಪ್ಪ) ರಮೇಶ್ ಶಿರಡೋಣ ಅವರ ಹೃದಯದ ಮಾತುಗಳು ನನ್ನ ಮನಸ್ಸನ್ನು ಇನ್ನು ಗಟ್ಟಿಮಾಡಿತ್ತು.ನನ್ನ ದೊಡ್ಡಮ್ಮ ಅನಸೂಯಾ ಗಡ್ಡದ(ಪೂಜಾರಿ) ಇವರ ನಿರಂತರ ಬೆಂಬಲವು ಸಿಕ್ಕಿದ್ದು ನನ್ನ ಪುಣ್ಯ. ನಮ್ಮದು ಅವಿಭಕ್ತ ಕುಟುಂಬ ಇರುವದರಿಂದ ನನ್ನ ಇನ್ನೊಬ್ಬ ಚಿಕ್ಕಪ್ಪ ಭೀಮು ಶಿರಡೋಣ , ಮತ್ತು ನಮ್ಮ ಚಿಕ್ಕಮ್ಮಂದಿಯರು ಶಾಲು ಮತ್ತು ಸುರೇಖಾ ಯಾವಾಗಲೂ ಹೇಳುತ್ತಿದ್ದರು , “ನಮ್ಮ ಸಂತೋಷ್ ಜಾಣ ಹುಡುಗ ಇವನು ಐಎಎಸ್ ಮಾಡುತ್ತಾನೆ”, ಇದು ನನಗೆ ಒತ್ತಡ ಎನಿಸಿದರೂ, ದೇಶ ಸೇವೆ ಮಾಡಬೇಕು ಎನ್ನುವ ಹಂಬಲ ಇರುವ ನನಗೆ, ಇವರೆಲ್ಲರ ಒಳ್ಳೆಯ ನುಡಿಗಳು ನನಗೆ ಸ್ಫೂರ್ತಿ ತುಂಬಿದ ಪರಿಣಾಮ, ನನ್ನ ಸಾಧನೆಗೆ ಕಾರಣ.
Categories: Articles